Monday, May 5, 2008

ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ...

ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ಸ್ಟಾಂಡಿನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ಗಳು, ಕ್ರಾಸ್ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ ನನಗೆ ಈ ಬೆಂಗಳೂರು ಪರಿಚಯವಾಗದೇ ಉಳಿದುಬಿಡುತ್ತಿತ್ತಾ? ಗೊತ್ತಿಲ್ಲ. ಪುಟ್ಟ ಮಗು ಕೈ ಹಿಡಿದು ನಡೆಯುವಂತೆ ನಾನು ಅವಳ ಕೈ ಹಿಡಿದು ನಡೆಯುತಿದ್ದರೆ ಅವಳು ಬೆಂಗಳೂರನ್ನು ಒಂದೊಂದಾಗಿ ತೋರಿಸುತ್ತಾ ಹೋಗುತ್ತಿದ್ದಳು. ನನ್ನ ಕಣ್ಣಲ್ಲಿ ಬೆರಗು, ಅವಳ ಕಣ್ಣಲ್ಲಿ ಸಾರ್ಥಕತೆ. ಬೆಂಗಳೂರಿನ ಬೀದಿಗಳನ್ನು ಸುತ್ತಿದ್ದೇ ಹಾಗೆ. ಸುತ್ತು ಹೊಡೆದು ಹೊಡೆದು ನಮ್ಮ ಕೊನೆಯ ನಿಲ್ದಾಣವಾಗುತ್ತಿದ್ದದ್ದು ಮಾತ್ರ ಕಲಾಕ್ಷೇತ್ರ. ಅಲ್ಲಿ ನಾನು ಅವಳು ಕುಳಿತು ನಾಟಕ ನೋಡುತ್ತಿದ್ದೆವು. ಪಾಪ್ ಕಾನರ್್ ತಿನ್ನುತ್ತಿದ್ದೆವು. ಕಡಲೆ ಕಾಯಿ ತಿನ್ನುತ್ತಿದ್ದೆವು. ನಮ್ಮ ಕೆಪಾಸಿಟಿ ಅಷ್ಟೆ ಆಗಿತ್ತು. ಒಮ್ಮೆಯೂ ಅವಳು ಐಸ್ಕ್ರೀಮ್ ಕೇಳಿದವಳಲ್ಲ. ಬಣ್ಣದ ಡ್ರೆಸ್ ಕೊಡಿಸೋ ಅಂತ ಹಟಕ್ಕೆ ಬಿದ್ದವಳಲ್ಲ. ಪಿಚ್ಚರ್ಗೋಗೋಣ ನಡೆಯೋ ಅಂತ ಕೈ ಹಿಡಿದು ಜಗ್ಗಿದವಳಲ್ಲ. ಅವಳು ಕೇಳಿದ್ದರೂ ನನಗೆ ಕೊಡಿಸುವ ತಾಕತ್ತಾದರೂ ಎಲ್ಲಿತ್ತು? ಅವಳೇ ಒಮ್ಮೆ ನಾನು ಊರಿಗೆ ಹೊರಟಾಗ ಐದು ರುಪಾಯಿನ ಕ್ಯಾಡ್ಬರೀಸ್ ಚಾಕ್ಲೆಟ್ ಕೊಡಿಸಿದ್ದಳು. ನಾನು ಅದನ್ನ ಪೆದ್ದುಪೆದ್ದಾಗಿ ಜತನದಿಂದ ಜೇಬಿನಲ್ಲೇ ಇಟ್ಟುಕೊಳ್ಳಲು ಹೋಗಿ ಮೈಸೂರು ತಲಪುವಷ್ಟರಲ್ಲಿ ಪಾಯಸದಂತಾಗಿತ್ತು.
ಇರಲಿ... ಆ ದಿನಗಳಲ್ಲಿ ನಾನು ಓಆರ್ಜಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ದಿನಕ್ಕೆ ತೊಂಬತ್ತು ರುಪಾಯಿ ಸಂಬಳ ಪ್ಲಸ್ ಇನ್ನೊಂದಿಷ್ಟು ಅದಕ್ಕೆ ಇದಕ್ಕೆ ಅಂತ ಸಿಗುತ್ತಿತ್ತು. ಯೂನಿಸೆಫ್ನವರ ಮಿಡ್ಡೇ ಮೀಲ್ ಬಗೆಗಿನ ಸವರ್ೆ ಅದು. ಗೆಳೆಯ ಶ್ರೀನಿವಾಸ್ನ ಗಿರಿನಗರದ ರೂಮಿನಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದೆ. ಹೊರಗೆ ಹೋದ್ರೆ ತಿಂಗಳುಗಟ್ಲೆ ಬರ್ತಿರಲಿಲ್ಲವಾದ್ದರಿಂದ ವಸತಿ ಸಮಸ್ಯೆ ಅಷ್ಟಿರಲಿಲ್ಲ. ಆದ್ರೂ ಇರಲಿ ಅಂತ ನಾನು ಗೆಳೆಯ ಹನೀಫ್ ಸೇರಿ ವಿಜಯನಗರದಲ್ಲೊಂದು ರೂಮ್ ಮಾಡಿದ್ವಿ. ಆ ರೂಮಿನ ಬಗ್ಗೆ ಬರೆದರೆ ಅದೇ ಒಂದು ಖಾಸ್ಬಾತ್ ಆದೀತು. ಅದನ್ನು ಮತ್ಯಾವಗಾದರು ಹೇಳ್ತೇನೆ.ಇಂಥ ಸಮಯದಲ್ಲಿ ನನ್ನಲ್ಲಿ ಕಾಸಿಗೆ ಬರ. ರೂಮ್ ಏನೋ ಕಷ್ಟ ಪಟ್ಟು ಮಾಡಿದ್ದೆ. ಆದ್ರೆ ಅಡುಗೆ? ಸ್ಟವ್ ಇಲ್ಲ. ಸೀಮೆ ಎಣ್ಣೆ ಇಲ್ಲ. ಹಾಸಿಕೊಳ್ಳಲು ನೆಟ್ಟಗೊಂದು ಚಾಪೆಯೂ ಇಲ್ಲ. ಹನೀಫ ರೂಮಿನಲ್ಲಿರುತ್ತಿದ್ದದ್ದೇ ಅಪರೂಪವಾದ್ದರಿಂದ ಅವನ ಚಾಪೆಯನ್ನೇ ನಾನು ಬಳಸಿಕೊಳ್ಳುತ್ತಿದ್ದೆ.ಆದ್ರೆ ಅಡುಗೆಗೆ ಏನು ಮಾಡುವುದು?ಒಮ್ಮೆ ಸವರ್ೆಗೆ ಟೀಮ್ ಸೆಲೆಕ್ಟ್ ಮಾಡುವ ಇಂಟರ್ ವ್ಯೂ ಇತ್ತು. ಎಲ್ಲೆಲ್ಲಿಂದಲೋ ಹುಡುಗ್ರು ಬಂದಿದ್ರು. ಅದರಲ್ಲೊಬ್ಬ ಹುಡುಗನ ಪರಿಚಯವಾಯಿತು. ಬೆಂಗಳೂರಿನವನೇ. ತುಂಬಾ ಆತ್ಮೀಯತೆಯಿಂದ ಮಾತಾಡಿಸಿದ. ಅದೂ ಇದು ಮಾತಾಡುತ್ತಾ ವಿಷಯ ಬದುಕಿನತ್ತ ಹೊರಳಿತು. ನನ್ನ ಪರಿಸ್ಥಿತಿ ಕೇಳಿ... ಅಯ್ಯೋ ಬನ್ನಿ ನಮ್ ಮನೆಗೆ ಅಂತ ಕರೆದೋಯ್ದ. ಅವನು ಕರೆದುಕೊಂಡು ಹೋದ ಏರಿಯಾ ಕೂಡ ನನಗೆ ನೆನಪಿಲ್ಲ. ಅವತ್ತು ಅವನ ಮನೆಯಲ್ಲಿ ಯಾರೂ ಇರಲಿಲ್ಲ. ಹೋದವನೆ ಅದೆಲ್ಲಿಟ್ಟಿದ್ದನೋ ಅಟ್ಟದ ಮೇಲಿದ್ದ ಒಂದು ಸ್ಟವ್ ತೆಗೆದು ಕೊಟ್ಟ. ಬತ್ತಿ ಸ್ಟವ್ ಅದು. ನಾನು ಸಂಕೋಚದಿಂದ ಬೇಡ ಅಂದೆ. ಇರಲಿ ತಗೊಳಿ ಅಂದ. ಬೇಡವೆಂದರೂ ಊಟ ಹಾಕಿದ. ನಾಳೆ ಸಿಕ್ತೇನೆ ಅಂತ ಬೀಳ್ಕೊಟ್ಟ.
ನಿಜ್ಜ ಹೇಳ್ಲ ಅದೇ ಸ್ಟವ್ನಿಂದಲೇ ನಾನು ಸುಮಾರು ದಿವಸ ಅನ್ನ ಬೇಯಿಸಿಕೊಂಡು ತಿಂದದ್ದು. ಟೊಮ್ಯಾಟೋ ಗೊಜ್ಜು ಮಾಡಿಕೊಂಡಿದ್ದು. ಬಿಸಿ ಬಿಸಿ ಆಮ್ಲೆಟ್ ಹಾಕಿಕೊಂಡಿದ್ದು. ಅವತ್ತು ಭೇಟಿಯಾದ ಆ ಗೆಳೆಯ ಮಾರನೆ ದಿನದಿಂದಲೇ ಕೆಲಸಕ್ಕೆ ಬರಲಿಲ್ಲ. ಸ್ಯಾಲರಿ ಸಾಲಲಿಲ್ಲವೋ ಮತ್ತಿನ್ನೇನೋ. ಅವತ್ತೇ ನಾವೆಲ್ಲ ಬಿಜಾಪುರಕ್ಕೆ ಹೊರಟು ಹೋದ್ವಿ. ಬರೋಬ್ಬರಿ ಒಂದೂವರೆ ತಿಂಗಳ ಸವರ್ೆ ಅದು. ಅವನ ಮುಖ ಮತ್ತೆ ನಾನು ನೋಡಲಿಲ್ಲ. ಆದ್ರೆ ಅವನು ಕೊಟ್ಟ ಆ ಸ್ಟವ್ ಮಾತ್ರ ನನ್ನಲ್ಲಿ ತುಂಬಾ ಕಾಲ ಉಳಿದಿತ್ತು.
ಬದುಕಿನ ಪಥದಲ್ಲಿ ಯಾರ್ಯಾರೋ ಎಲ್ಲೆಲ್ಲಿಂದಲೋ ಬಂದು ಸಹಾಯ ಮಾಡಿಬಿಡುತ್ತಾರೆ. ಅಂಥವರಿಂದಲೇ ಅಲ್ಲವೇ ಬದುಕು ಅವುಡುಗಚ್ಚಿ ಚಿಗಿತುಕೊಳ್ಳುತ್ತಾ ಹೋಗುವುದು. ಅವೆಲ್ಲ ಸಣ್ಣ ಸಣ್ಣ ಸಹಾಯಗಳಿರಬಹುದು. ಆದ್ರೆ ಇಡೀ ದಾರಿ ಸುಗಮವಾಗಿದ್ದು ಮಾತ್ರ ಅವರೆಲ್ಲರಿಂದಲೇ ಅನ್ನುವುದನ್ನ ಮರೆಯಬಾರದು.
ಯಾಕೋ ಇವತ್ತು ಬರೆಯುತ್ತಾ ಕುಳಿತವನಿಗೆ ಇದೆಲ್ಲ ನೆನಪಾಯಿತು.

Saturday, April 26, 2008

ಅಕ್ಕ ಹೇಳಿದ ಕುಡುಕನ ಪ್ರಸಂಗ...


ನನ್ನ ಭಾವನದೊಂದು ತೋಟ ಇದೆ ಊರಲ್ಲಿ. ಅವಾಗವಾಗ ಅಲ್ಲಿಗೆ ಹೋಗಿ ಬರೋದು ಅಭ್ಯಾಸ. ಹಾಗೆ ಹೋಗಲಿಲ್ಲ ಅಂದ್ರೆ ಭಾವ ಹುಷಾರು, ಒಂದಿನ ಹೋಗಿ ನೋಡಿದ್ರೆ ನಿಮ್ಮ ತೋಟಾನೆ ಇರೋಲ್ಲ ಅಂತ ನಾವು ರೇಗಿಸ್ತಿರ್ತೀವಿ. ಹಾಗಾಗಿ ರಜೆ ಸಿಕ್ಕಿದ್ರೆ ಸಾಕು ತೋಟ ಅಂತ ಭಾವ ಪರಾರಿ ಅಗಿಬಿಡ್ತಾರೆ.

ಈ ತೋಟ ನೋಡ್ಕೊಳೋಕೆ ಅಂತ ಅಲ್ಲೊಂದು ಸಂಸಾರ ಇಟ್ಟಿದಾರೆ. ಮಹಾನ್ ಕುಡುಕನಂತೆ ಆತ. ಆದ್ರೆ ಭಾವ ತೋಟಕ್ಕೆ ಹೋದಾಗ ಮಾತ್ರ ಆತ ಬಿಲ್ಕುಲ್ ಕುಡಿಯೋಲ್ಲವಂತೆ.

ಆದ್ರೆ ಅವತ್ತು ಆಗಿದ್ದೇ ಬೇರೆ. ಯಥಾ ಪ್ರಕಾರ ಇವರು ತೋಟಕ್ಕೆ ಹೋಗಿದ್ದಾರೆ. ಎಲ್ಲಾ ಸರಿ ಇದೆಯಾ ಅಂತ ನೋಡಿದಾರೆ. ಕೊನೆಗೆ ಒಂದು ಹೊಂಗೆ ಮರದ ಕೆಳಗೆ ಉಸ್ಸಪ್ಪ ಅಂತ ತೋಟದ ಮಾಲಿ ಜೊತೆ ಕುಳಿತಿದ್ದಾರೆ. ಅಷ್ಟರಲ್ಲಿ ಅದೇ ಊರಿನವನೊಬ್ಬ ಅಲ್ಲಿಗೆ ಬಂದಿದ್ದಾನೆ. ಅವನು ಬರುವ ರೀತಿ ನೋಡಿದರೆ ದೇವರು ಒಳಗಿದ್ದ ಅನಿಸುತ್ತಿತ್ತಂತೆ.ಬಂದವನು ದೊರೆ ಹತ್ತು ರುಪಾಯಿ ಕೊಡಿ ಅಂದವನೆ.ಭಾವ ಇಲ್ಲ ಹೋಗಿ ಅಂದಿದಾರೆ.ಅವನು ಬಿಟ್ಟಿಲ್ಲ. ಕೊನೆಗೆ ಹಾಳಾಗಿ ಹೋಗು ಅಂತ ಭಾವ ಹತ್ತು ರುಪಾಯಿ ಕೊಟ್ಟು ಅದನ್ನು ಮರೆತೂ ಬಿಟ್ಟಿದ್ದಾರೆ.

ಆದ್ರೆ ಹಾಗೆ ಈಸಿಕೊಂಡು ಹೋದವನು ಹಾಗೆ ಫುಲ್ ಟೈಟಾಗಿ ಬಂದು ಎದುರಿಗೆ ನಿಂತಾಗಲೇ ಇವರಿಗೆ ಗೊತ್ತಾಗಿದ್ದು ಇವನ ವರಸೆ ಬೇರೇನೆ ಇದೆ ಅಂತ.

ರೀ ಸ್ವಾಮಿ, ನನಗೆ ಕೇವಲ ಹತ್ತು ರುಪಾಯಿ ಕೊಡ್ತೀರಾ? ಎಷ್ಟು ಕೊಬ್ಬು ನಿನಗೆ? ಅಂದವನೆ.

ಭಾವ ಇದೊಳ್ಳೆ ಆಯ್ತಲ್ಲ, ದುಡ್ಡು ಕೊಟ್ಟುಬುಟ್ಟು ಉಗಿಸಿಕೊಂಡಂಗಾಯ್ತಲ್ಲ ಅಂದುಕೊಂಡು ಹೋಗಯ್ಯ ಅತ್ಲಾಗೆ ಅಂತ ಬಟ್ಟೆ ಕೊಡವಿಕೊಂಡು ಎದ್ದವರೆ.

ಮಾಲಿಯೂ ಹೋಯ್ತೀಯೋ ಇಲ್ಲ ಒದೆ ಬೇಕೋ ಅಂದವನೆ.

ಆದರೆ ಅವನು ಬಿಡಬೇಕಲ್ಲ.

ಎಲ್ಲಿಗ್ರಿ ಹೋಗ್ತೀರಾ? ನಂಗೆ ಹತ್ತು ರುಪಾಯಿ ಕೊಟ್ಟು ಅವಮಾನ ಮಾಡಿದೀರಾ? ನೀವು ಮಾತ್ರ ಸಾವಿರ ಗಟ್ಟಲೆ ಉಯ್ಕೊತೀರಾ? ನಮಗೆ ಮಾ.....ತ್ರ ....ಹ.....ತ್ತು ....ರು .......ಪಾಯೀನಾ? ಈಡಿಯಟ್....

ಇನ್ನೂ ಏನೇನೋ?

ಭಾವನಿಗೆ ಕೋಪ ಬಂದಿದೆ.

ಹೋಗ್ತೀಯ ಇಲ್ಲ ಒದೆ ಬೇಕಾ ಅಂದಿದಾರೆ.

ನೀನೇನು ಒದಿಯೋದು. ನಾನೆ ಒದೀತೀನಿ ತಗೋ ಅಂತ ಕಾಲೆತ್ತಿಕೊಂಡು ಬಂದವನು ಅಲ್ಲೇ ಮುಗ್ಗರಿಸಿ ಬಿದ್ದಿದ್ದಾನೆ.ಒಳ್ಳೆ ಕಥೆಯಾಯಿತಲ್ಲಪ್ಪ ಅಂತ ತೋಟದ ಕಾವಲುಗಾರ ಇವರು ಇಬ್ಬರೂ ಸೇರಿಕೊಂಡು ಎರಡು ತದುಕಿದ್ದಾರೆ.ಆಮೇಲೆ ಅಲ್ಲಿಂದ ಎದ್ದವನು ಸೀದಾ ಊರ ಕಡೆಗೆ ಮಾಯವಾಗಿದ್ದಾನೆ.

ಅವತ್ತಿಂದ ಭಾವ ಊರಿಗೋಗ್ತೀನಿ ಅಂದಾಗಲೆಲ್ಲ ಈ ಘಟನೆ ನೆನಪಾಗುತ್ತಂತೆ ಅಕ್ಕನ ಮನೆಯವರಿಗೆ.

ಹುಷಾರು ಅಪ್ಪ ಯಾರಿಗೂ ಕಾಸು ಕೊಡಬೇಡಿ. ಒದ್ದುಗಿದ್ದಾರು ಅಂತ ಮಗಳು ರೇಗಿಸ್ತಿರ್ತಾಳೆ.

ಇನ್ನೂ ಸ್ವಾರಸ್ಯ ಅಂದ್ರೆ ಇದೇ ವ್ಯಕ್ತಿ ಹಿಂದೊಮ್ಮೆ ಹೀಗೆ ಗಲಾಟೆ ಮಾಡಿದ್ದಾಗ ಅಲ್ಲೇ ಇದ್ದ ಬಾವಿಗೆ ಎತ್ತಿ ಹಾಕಿದ್ರಂತೆ.ಈ ಕುಡುಕನ ಪ್ರಸಂಗ ಹೇಳಿದ್ದು ನನ್ನ ಅಕ್ಕ. ಮೊನ್ನೆ ಮಂಡ್ಯಕ್ಕೆ ಹೋಗಿದ್ದಾಗ.

Monday, April 21, 2008

ಎಂಟು ವರ್ಷಗಳ ನಂತರ ಒಡಮೂಡಿದ ಈ ಕವಿತೆ ...


ನಾನು ಕವಿತೆ ಬರೆದೇ ಸುಮಾರು ವರ್ಷಗಳಾಗಿ ಹೋದವು. ಈ ನಡುವೆ ಬರೀಬೇಕೆಂದು ಯಾವತ್ತೂ ಅನಿಸಿಯೇ ಇರಲಿಲ್ಲ. ಅಥವಾ ನನ್ನ ಮನಸ್ಸು ಅದಕ್ಕೆ ಸಿದ್ಧವಿರಲಿಲ್ಲವೋ ಗೊತ್ತಿಲ್ಲ. ಒಂದು ಕಾಲಕ್ಕೆ ಎಲ್ಲೆಂದರಲ್ಲಿ ಕವಿತೆ ಬರೆದು ಗೆಳೆಯರನ್ನು ಬೆಚ್ಚಿ ಬೀಳಿಸಿದ್ದೆ. ಕಾಲೇಜಿನ ಕಾರಿಡಾರಿನಲ್ಲಿ ಕವಿ ಬಂದ್ರು ಅಂತಿದ್ರು. ಅದಕ್ಕೆ ತಕ್ಕುನಾಗಿ ಅವಾಗವಾಗ ಜುಬ್ಬ ಹಾಕಿಕೊಂಡು, ಗಡ್ಡ ಬಿಟ್ಕೊಂಡು ಹೋಗೋದೂ ಇತ್ತು. ಹೊಸ ಕವಿತೆ ಬರೆದು ಬರೆದು ಕಾಲೇಜಿನ ನೋಟೀಸ್ ಬೋಡರ್ಿಗೆ ಹಾಕೋದು ಆಗ ನನಗೆ ರೂಢಿ. ಇದನ್ನು ನೋಡಿ ಉತ್ತರ ಕನರ್ಾಟಕದ ಗೆಳೆಯ ಬಸವರಾಜ ನೀನೇನು ಕವಿತೆಯಲ್ಲೆ ಎಲ್ರನ್ನೂ ಕೊಲ್ಲೋಂಗ್ ಕಾಣಿಸ್ತೀಯಲ್ಲೋ ಮಾರಾಯ ಅಂತಿದ್ದ. ಹಂಗ ಬರೀತಿದ್ದೆ. ಇಡೀ ಕಾಲೇಜಿಗೆ ಕವಿತೆಯಲ್ಲಿ ಫಸ್ಟ್ ಪ್ರೈಜ್ ಹೊಡಕೊಂಡು ಬಂದಿದ್ದೆ. ಆಮೇಲೆ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಮಾಡಿದ್ದ ಒಂದು ವಾರದ ಪೊಯಿಟ್ರಿ ವಕರ್್ಶಾಪ್ಗೆ ಹೋಗಿದ್ದೆ. ಅದೊಂದು ಮರೆಯಲಾಗದ ಅನುಭವ. ಇನ್ನೊಮ್ಮೆ ಯಾವತ್ತಾದರೂ ಬರೆದೇನು. ಅಲ್ಲಿಗೆ ಬಂದವರಲ್ಲಿ ತುಂಬಾ ಜನ ನನ್ನ ಥರಾನೆ ಪತ್ರಕರ್ತರಾಗಿದ್ದಾರೆ. ಹಾಗೆ ಶುರುವಾದ ಕವಿತೆ ಯಾಕೋ ಬೆಂಗಳೂರಿಗೆ ಬಂದ ಮೇಲೆ ಗೊತ್ತಿಲ್ಲದೇ ಕಳೆದುಹೋಯಿತು. ನಾನೂ ಹುಡುಕುವ ಉಸಾಬರಿ ತೆಗೆದುಕೊಳ್ಳಲಿಲ್ಲ.ಓ ಮನಸೇಯಲ್ಲಿ ಇನ್ಬಾಕ್ಸ್ ಅಂಕಣದಲ್ಲಿ ಒಂದಿಷ್ಟು ಸಣ್ಣ ಸಣ್ಣ ಕವಿತೆಗಳನ್ನು ಬರೆದದ್ದು ಬಿಟ್ಟರೆ ಮತ್ತೇನೂ ಬರೆದಿಲ್ಲ. ಅದು ಬಹಳ ಪಾಪ್ಯುಲರ್ ಆಗಿಹೋಯಿತು.

ಇವತ್ತು ಸುಮ್ಮನೆ ಕುಳಿತವನಿಗೆ ಅದ್ಯಾಕೋ ಹೀಗೆ ಬರೆಯಬೇಕೆನಿಸಿತು. ಬರೆದಿದ್ದೇನೆ.

ಸುಮ್ಮನೆ ಓದಿಕೊಳ್ಳಿ.ಎಂಟು ವರ್ಷಗಳ ನಂತರ ಒಡಮೂಡಿದ ಕವಿತೆ.


ನಾನು ಹಾಗೇ!


ನಾನು ಹಾಗೇ!

ನನ್ನ ಮನದ ಕಡಲಿಗೆ

ಟಾಚರ್್ ಬಿಟ್ಟು ನೋಡಿಕೊಂಡವನು

ಎದೆಯ ಪ್ರೀತಿಗೆ ಸೇತುವೆ ಕಟ್ಟಿ

ಯಾರಿಗಾಗೋ ಕಾದು ಕುಳಿತವನು


ನಾನು ಹಾಗೇ!

ಬಣ್ಣಕ್ಕೆ ಬಣ್ಣ ಹಚ್ಚಿ

ಅದರ ಬೆರಗ ನೋಡುವವನು

ಅನ್ಲಿಮಿಟ್ ಆಕಾಶಕ್ಕೆ

ಏಣಿ ಹಾಕಲು ಹೊರಟವನು


ನಾನು ಹಾಗೇ!

ಅವಳ ಪ್ರೀತಿಗೆ ಸೋತಹಾಗೆ

ಮೋಸಕ್ಕೂ ಸೋತವನು

ಖಾಲಿ ಹೃದಯವಿಟ್ಟುಕೊಂಡು

ಒಳಗೆ ಮಾತ್ರ

ಚಿಲಕವಿಟ್ಟುಕೊಂಡವನು


ನಾನು ಹಾಗೇ!

ನದಿ ತಿರುವಿನಂತೆ, ಓಘದಂತೆ

ಬೆಟ್ಟದಿಂದಿಳಿದು ಓಡುವ

ಪುಟ್ಟ ಜರಿಯಂತೆ

ಆಮೇಲೆ ಕಾಲ ಬುಡದಲ್ಲೇ

ಅದನ್ನೆಲ್ಲ ಹೀರಿಕೊಂಡು ಬೆಳೆದ

ಸಂಪಿಗೆ ಮರದಂತೆ


ನಾನು ಹಾಗೇ!

ಸುಖದ ಸಂಬಂಧಿ

ದುಃಖದ ಬಂಧಿ


ನಾನು ಹಾಗೇ!

ನನ್ನ ಹಾಗೇ

ಮೂರ್ತ, ಅಮೂರ್ತ


ನಾನು ಹೇಳಬೇಕೆಂದ್ರೆ,

ಹಾಗೇ!

ಥೇಟ್ ನನ್ನ ಹಾಗೇ!

Saturday, April 19, 2008

ಪ್ರೀತಿಗೊಂದು ಕಾರಣ ಕೊಡೋ?


ಅವರಿಬ್ಬರೂ ಪ್ರಾಣ ಹೋಗುವಷ್ಟು ಪ್ರೀತಿಸುತ್ತಿದ್ದರು. ನಿನಗೆ ನಾನು ನನಗೆ ನೀನು ಅನ್ನುತ್ತಾರಲ್ಲಾ ಹಾಗೆ. ಆದರೆ ಅದ್ಯಾಕೋ ಗೊತ್ತಿಲ್ಲ, ಒಂದಿನ ಹುಡುಗಿ ಮೀರಾಳಿಗೆ ತನ್ನ ಹುಡುಗ ಪ್ರೀತಂ ನನ್ನನ್ನು ಪ್ರೀತಿಸುತ್ತಿರುವುದಕ್ಕೆ ಕಾರಣ ತಿಳಿದುಕೊಳ್ಳಬೇಕೆನ್ನುವ ಹಪಾಹಪಿ ಕಾಡುತ್ತದೆ. ಎದುರಿಗೆ ಕುಳಿತವನ ಕೈ ಹಿಡಿದು ಕೇಳುತ್ತಾಳೆ.

ಹೇಳು ಪ್ರೀತಂ why do you like me? why do you love me?

ಪ್ರೀತಮ್ ಏಕ್ದಮ್ ಕಂಗಾಲು.

ಇಷ್ಟು ದಿನ ಇಲ್ಲದ ಈ ಅನುಮಾನ ಇವಳಿಗ್ಯಾಕಪ್ಪ ಈಗ ಬಂತು ಅಂದುಕೊಳ್ಳುತ್ತಾನೆ.

"ನಿನ್ನನ್ನು ಪ್ರೀತಿಸುತ್ತಿರುವುದಕ್ಕೆ, ಇಷ್ಟ ಆಗಿರೋದಕ್ಕೆ ಕಾರಣಗಳಿಲ್ಲ ಕಣೆ, But I really like u. ನಿನ್ನನ್ನು ನಾನು ಸತ್ತು ಹೋಗುವಷ್ಟು ಪ್ರೀತಿಸುತ್ತೇನೆ ಅಂತ ಹೇಗೆ ಹೇಳಲಿ...?

" " ನನ್ನನ್ನು ಪ್ರೀತಿಸುತ್ತಿರುವುದಕ್ಕೆ ನಿನಗೊಂದು ಕಾರಣ ಹೇಳಲು ಗೊತ್ತಿಲ್ಲ. ಅದು ಹ್ಯಾಗೆ ಹೇಳ್ತೀಯ... ನೀನಂದ್ರೆ ನನಗೆ ಇಷ್ಟ ಅಂತ? ಶುದ್ಧ ಬೊಗಳೆ ನಿಂದು ಹೋಗೋ " ಕಣ್ಣೀರಿಡುತ್ತಾಳೆ ಮೀರಾ." ನೀನು ನನಗೆ ಕಾರಣ ಹೇಳಲೇ ಬೇಕು ಕಣೋ. ಯಾಕೇಂದ್ರೆ ನನ್ನ ಗೆಳತಿಯರಿಗೆಲ್ಲ ಅವರ ಬಾಯ್ ಫ್ರೆಂಡ್ಸ್ ಕಾರಣ ಹೇಳಿದ್ದಾರೆ. ನೀನೂ ಹೇಳು? ಪ್ರೀತ್ಸೋದಕ್ಕೆ ಒಂದು ಕಾರಣ ಹೇಳೋ ತಾಕತ್ತು ನಿನಗಿಲ್ವಾ? " ಮೀರಾ ಒಂದೇ ಸಮನೆ ಕನವರಿಸುತ್ತಾಳೆ.

ಪ್ರೀತಮ್ ತಡವರಿಸುತ್ತಾನೆ.

ಏನು ಹೇಳಲಿ ಇವಳಿಗೆ? ಹೇಳಿದ್ದು ಇಷ್ಟ ಆಗದೇ ನನ್ನನ್ನು ತಿರಸ್ಕರಿಸಿಬಿಟ್ಟರೆ? ಓ ದೇವರೆ, ಇವಳಗೆ ಇಂಥ ಕಾರಣ ಹುಡುಕುವ ಹುಚ್ಚು ಯಾಕಾದರೂ ಬಂತಪ್ಪಾ?ಮೀರಾಳ ಕೈಹಿಡಿದು ಕೇಳುತ್ತಾನೆ.

"ಹೇಳಲೇಬೇಕಾ?

""ಹ್ಞೂಂ" ಅನ್ನುತ್ತಾಳೆ ಮೀರಾ.

ಪ್ರೀತಂ ಒಲ್ಲದ ಮನಸ್ಸಿನಿಂದ ಅವಳನ್ನೇ ಒಮ್ಮೆ ದಿಟ್ಟಿಸಿನೋಡಿ ಹೇಳುತ್ತಾನೆ.

" ನಿನ್ನನ್ನ ನಾನು ಯಾಕೆ ಪ್ರೀತಿಸ್ತೀನಿ ಅಂದ್ರೆ,U are beautiful!ನೀನ್ನ ವಾಯ್ಸ್ ತುಂಬಾ ಸ್ವೀಟಾಗಿದೆ.ನೀನು ತುಂಬಾ ಕೇರಿಂಗ್ ನೇಚರ್ ಇರೋ ಹುಡುಗಿ.ನಿನ್ನ ನಗು ಇದೆಯಲ್ಲ ಅದು ಈಗ ತಾನೆ ಅರಳಿದ ಹೂವಿನಷ್ಟು ಫ್ರೆಷ್ ಆಗಿದೆ.ಮಾತು, ಮಾತಾಡ್ತೀಯಲ್ಲ ಅದೊಂಥರ ಜೇನಿನಲ್ಲಿ ಅದ್ದಿ ಅದ್ದಿ ತೆಗೆದಂಗಿರುತ್ತೆ.ಇಷ್ಟು ಹೇಳಿದ್ದೇ ತಡ ಮೀರಾ ನೀಲಾಕಾಶದಲ್ಲಿ ನೆಗೆದು ಹಾರಿದಳು. ಅವಳ ಮನದಲ್ಲಿ ಒಟ್ಟಿಗೆ ನೂರು ಹೂ ಅರಳಿದ ಸಂಭ್ರಮ.

***

ಪ್ರೀತಿ ಹೀಗೇ ಮುಂದುವರೀತು. ಪ್ರೀತಂ ತನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುತ್ತಿದ್ದಾನೆ ಅನ್ನುವುದಕ್ಕೆ ಮೀರಾಳಿಗೆ ರೀಸನ್ ಸಿಕ್ಕಿತ್ತಲ್ಲ, ಅದನ್ನೇ ತನ್ನೆಲ್ಲ ಗೆಳತಿಯರ ಹತ್ತಿರ ಹೇಳಿಕೊಂಡು ಓಡಾಡಿದಳು. ಪ್ರೀತಂ ಅಂದ್ರೆ ಮೀರಾಳಿಗೆ ಕೇವಲ ಪ್ರೀತಿ ಮಾತ್ರವಲ್ಲ... ಅವನೇ ಬದುಕು... ಅವನೇ ಉಸಿರು... ಅವನೇ ಅವಳ ನಾಡಿ ಮಿಡಿತ... ಅವನೇ ಅವಳ ಎಲ್ಲಾ!ಆದರೆ ವಿಧಿ ಬಿಡಬೇಕಲ್ಲ.ಎಂದಿನಂತೆ ಮೀರಾ ಅವತ್ತು ತನ್ನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಬೇಕಾದ್ರೆ, ಎದುರಿನಿಂದ ಬಂದ ಕಾರಿನವ ಹೊಡೆದುಕೊಂಡು ಹೋಗಿದ್ದ. ಮೀರಾಳದು ಅನ್ಕಾನ್ಷಿಯಸ್ ಲೆವೆಲ್. ಸುದ್ದಿ ಕೇಳಿ ಓಡೋಡಿ ಬಂದ ಪ್ರೀತಮ್ಗೆ ದಿಕ್ಕೇ ತೋಚದಂತಾಗುತ್ತದೆ. ಎಷ್ಟು ಚೆಂದಕ್ಕಿದ್ದ ಹುಡುಗಿಯನ್ನ ಹೀಗೆ ಮಾತೇ ಇಲ್ಲದಂಗೆ ಮಾಡಿಬಿಟ್ಟಲ್ಲ ದೇವರೆ. ನೀನು ಇಷ್ಟೊಂದು ಕ್ರೂರಿ ಅಂತ ನನಗೆ ಇದುವರೆಗೂ ಗೊತ್ತಿರಲಿಲ್ಲ... ಐ ಹೇಟ್ ಯು... ಐ ಹೇಟ್ ಯು ಹಲಬುತ್ತಾನೆ.ಮೀರಾ ತನ್ನ ಪ್ರೀತಿಗೆ ಕಾರಣ ಕೇಳಿದ್ದು ನೆನಪಾಗಿ ಪ್ರೀತಂ ಮನಸ್ಸು ಅಯ್ಯೋ ಅಂತ ರೋದಿಸುತ್ತದೆ.ತಕ್ಷಣ ಅಲ್ಲಿದ್ದ ಒಂದು ಪೇಪರ್ನಲ್ಲಿ ಏನನ್ನೋ ಬರೆದು ಅವಳ ಪಕ್ಕಕ್ಕಿಟ್ಟು ಹೋಗುತ್ತ್ತಾನೆ.ಮೀರಾಳಿಗೆ ಎಚ್ಚರ ಬಂದಾದ ಮೇಲೆ ಪಕ್ಕಕ್ಕೆ ತಿರುಗಿದರೆ ಅಲ್ಲೊಂದು ಪುಟ್ಟ ಲೆಟರು.ಕುತೂಹಲದಿಂದ ಹಿಡಿದೆತ್ತಿ ಓದುತ್ತಾಳೆ..... ಡಾಲರ್ಿಂಗ್ ಅವತ್ತು ಪ್ರೀತಿಗೆ ಕಾರಣ ಕೇಳಿದೆ ಅಲ್ವಾ!ಈಗ ನೋಡು ನಿನ್ನನ್ನು ಪ್ರೀತಿಸಲಿಕ್ಕೆ ಕಾರಣಗಳೇ ಇಲ್ಲ.ಯಾಕೆಂದರೆ,ನೀನಗೀಗ ಜೇನಿನಲ್ಲಿ ಅದ್ದಿ ತೆಗೆದಂಗೆ ಮಾತನಾಡಲು ಆಗುತ್ತಿಲ್ಲ. ಮುಖ ಒಣಗಿ ಹೋದ ಹೂವಿನಂತಿದೆ.ನಿನಗೆ ನನ್ನ ಬಗ್ಗೆ ಒಂದು ಪ್ರೀತಿ ಇತ್ತಲ್ಲ, ಕೇರ್ ಇತ್ತಲ್ಲ ಅದು ಈಗ ನಿನ್ನಿಂದ ಕೊಡಲು ಸಾಧ್ಯವೇ?ನಿನ್ನ ಆ ನಗು, ಎಲ್ಲಿ ಹೋಯ್ತೆ ಅದು?ನಿಜ್ಜ ಹೇಳ್ಲ, ಪ್ರೀತಿಗೆ ಯಾವತ್ತೂ ಕಾರಣ ಬೇಕಿಲ್ಲ!ಯಾಕೆಂದ್ರೆ ನಾನು ಈಗಲೂ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ.ಸ್ಟಿಲ್ ಐ ಲವ್ ಯುಮೊದಲಿಗೆ ಯಾರೋ ಎದೆಯಾಳದಲ್ಲಿ ಕುಳಿತು ಒಮ್ಮೆಲೇ ನೂರು ಡೈನಮೇಟ್ ಸಿಡಿಸಿದ ಹಾಗಾಯಿತು. ಮರುಕ್ಷಣ ನಿರಾಳ.

***

ಅವತ್ತು ಸಂಜೆ ಪ್ರೀತಮ್ ಬಂದ. ಮೀರಾ ಇನ್ನೂ ನಿದ್ರೆಯಲ್ಲಿದ್ದಳು. ಪಕ್ಕದಲ್ಲಿ ಕುಳಿತವನಗೆ ಕಾಣಿಸಿದ್ದು ಅವಳ ಕೈಯಲ್ಲಿ ತಾನು ಬರೆದಿಟ್ಟು ಹೋಗಿದ್ದ ಪತ್ರ. ಎದೆಗವಚಿಕೊಂಡು ಮಲಗಿದ್ದಳು.ಯಾಕೋ ಅವಳ ಪಕ್ಕದಲ್ಲಿ ಕುಳಿತ ಕ್ಷಣ ಕಣ್ಣು ಒದ್ದೆಯಾಗತೊಡಗಿತು. ಅವಳ ತಲೆ ಸವರಿದ. ಇವನ ಕಣ್ಣ ಕೊನೆಯಿಂದ ಇಳಿದ ಹನಿಯೊಂದು ಅವಳ ಕೆನ್ನೆ ಮೇಲೆ ಜಾರಿ ಬಿದ್ದು ಮೆಲ್ಲಗೆ ಕಣ್ಣು ತೆರೆದಳು.

"ಪ್ರಿತಂ......."

ಮೀರಾಳ ಕೈ ಪ್ರೀತಂನ ಕೈ ತಡಕಿತು.

ಪ್ರೀತಮ್ ಮೆಲ್ಲಗೆ ಅವಳ ಕೈ ಅದುಮಿದ.

ಎಲ್ಲಾ ಅರ್ಥವಾದವಳಂತೆ ಅವಳ ಮುಖದಲ್ಲೊಂದು ತೆಳು ಮಂದಹಾಸ.

***

ಈಗ ಹೇಳಿ ಪ್ರೀತಿಸಲು ಕಾರಣ ಬೇಕಾ?

Friday, April 18, 2008

ಒಂದು ಮಜಬೂತಾದ ಕತೆ ಹಿಡಿದುಕೊಂಡು ಕುಳಿತ ...

ಯಾಕೋ ಗೊತ್ತಿಲ್ಲ ಒಂದು ಫಿಲ್ಮ್ ತೆಗೀಬೇಕು ಅನ್ನೋ ಆಸೆ ಇತ್ತೀಚೆಗೆ ಬಲವಾಗಿ ಕಾಡತೊಡಗಿದೆ. ಅದ್ಭುತವಾದೊಂದು ಕಥೆ ರೆಡಿ ಮಾಡಿಟ್ಟುಕೊಂಡಿದ್ದೇನೆ. ಅದು ಎಂಥ ಕತೆ ಎಂದ್ರೆ ಅದನ್ನು ಗೆಳೆಯನಿಗೆ ಮೊನ್ನೆ ಕೂರಿಸಿಕೊಂಡು ಹೇಳುತ್ತಾ ಹೋದೆ. ಅದನ್ನು ನಾನು ಹೇಳಿ ಮುಗಿಸೋ ಅಷ್ಟರಲ್ಲಿ ಅವನು ತುಂಬಾ ಭಾವುಕನಾಗಿದ್ದ. ಆ ಕಥೆಯ ಹಂದರವೇ ಹಾಗಿದೆ. ಸಣ್ಣ ಸಣ್ಣ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಡುವ ಪ್ರಯತ್ನ ಅದು.
ಕಮಷರ್ಿಯಲ್ ಆಗಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಮಜಬೂತಾದ ಕತೆ ಅದು.ನನಗೆ ಟೆಕ್ನಿಕಲ್ ಸೈಡ್ ಗೊತ್ತಿಲ್ಲದಿರಬಹುದು. ಆದ್ರೆ ಒಂದು ಫಿಲ್ಮ್ ಹೇಗಿರಬೇಕು ಅನ್ನೋದನ್ನ ಅದ್ಭುತವಾಗಿ ವéಿಷುವಲೈಸ್ ಮಾಡೋ ಅಷ್ಟು ಕಲ್ಪನೆ ನನಗಿದೆ. ಒಮ್ಮೊಮ್ಮೆ ಈ ಎಲ್ಲ ಕೆಲಸ ಬಿಟ್ಟು ಫಿಲ್ಮ್ ದಾರಿ ಹಿಡಿದುಬಿಡೋಣವೇ ಅನ್ನಿಸುತ್ತೆ. ಹಾಗಂದುಕೊಂಡ ಮರುಕ್ಷಣವೇ ಹಾಗೆಲ್ಲ ಮಾಡಿಗೀಡಿಯೇ ಮಗನೇ ಅಂತ ಮನಸ್ಸು ಕೈ ಹಿಡಿದು ಜಗ್ಗುತ್ತೆ.ಹಾಗೆ ನೋಡಿದರೆ ಈ ಫಿಲ್ಮ್ ಹುಚ್ಚು ನನಗೆ ಹೊಸದೇನಲ್ಲ. ನನ್ನ ಕಾಲೇಜಿನ ದಿನಗಳಲ್ಲಿಯೇ ನನಗೆ ಅಂಥದ್ದೊಂದು ಹುಚ್ಚು ತೀವ್ರವಾಗಿತ್ತು. ಗೆಳೆಯರೆಲ್ಲ ಸೇರಿ ಸಾರ್ ಇವನು ಫಿಲ್ಮ್ ಡೈರೆಕ್ಡ್ ಮಾಡಬೇಕಂತೆ...ಇನ್ಸ್ಟಿಟ್ಯೂಟ್ಗೆ ಸೇರಿಸಿಕೊಳ್ಳಿ ಸಾರ್ ಅಂತ ನಂಜರಾಜೇ ಅರಸ್ಗೆ ದುಂಬಾಲು ಬೀಳುತ್ತಿದ್ದರು. ಅವರು ಆಗತಾನೆ ಮೈಸೂರು ಯೂನಿವಸರ್ಿಟಿಯಲ್ಲಿ ಆರಂಭವಾಗಿದ್ದ ಫಿಲ್ಮ್ ಇನ್ಸ್ಟಿಟ್ಯೂಟ್ನ ಛೀಫ್ ಆಗಿದ್ದರು. ಅದಕ್ಕೆ ಅವರು ಎಷ್ಟು ಎಕರೆ ಜಮೀನು ಇಟ್ಟಿದ್ದೀಯಯ್ಯ ...ಮಾರಿಬಿಟ್ಟು ಬಾ ನಿನ್ನನ್ನೇ ಹೀರೋ ಮಾಡ್ತೀನಿ... ಅಂತ ರೇಗಿಸ್ತಿದ್ದರು. ಒಮ್ಮೆ ಅವರು ಒಂದು ಫಿಲ್ಮ್ ಶುರು ಮಾಡಿದ್ದು ನೆನಪಿದೆ. ಹೆಸರು ಮರೆತುಹೋಗಿದೆ. ಕುಕ್ಕರಹಳ್ಳಿ ಕೆರೆಯ ಮೇಲೆ ಕುಳಿತಿದ್ದ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಆವರ ಫಿಲ್ಮ್ನ ಎಲ್ಲಾ ಹಾಡುಗಳನ್ನು ಕೇಳಿಸಿದ್ದರು. ಹಂಸಲೇಖ ಕಾಸ್ಟ್ಲೀ ಕಣಯ್ಯಾ ಅದಕ್ಕೆ ಬೇರೊಬ್ಬನ ಹತ್ತಿರ ಮಾಡಿಸಿದ್ದೀನಿ ಅಂದಿದ್ದರು. ನಿಜಕ್ಕೂ ಆ ಹಾಡುಗಳು ತುಂಬಾ ಚೆನ್ನಾಗಿದ್ದವು. ಅದಾದ ಮೇಲೆ ನಾನೂ ಬೆಂಗಳೂರಿನ ಸೆರಗು ಹಿಡಿದು ಬಂದುಬಿಟ್ಟೆ. ಅವರ ಆ ಫಿಲ್ಮ್ ಏನಾಯಿತೋ ಗೊತ್ತೇ ಆಗಲಿಲ್ಲ.ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ದಾರಿ ಹಿಡಿದ ಮೇಲೆ ಟೈಮ್ ಅನ್ನೋದು ಹುರಕ್ಕೊಂಡು ಮುಕ್ಕತೊಡಗಿತು. ಅದರ ಗುಂಗಿನಲ್ಲೇ ಮುಳುಗಿಹೋದೆ. ಈಗ ಮತ್ತೆ ಫಿಲ್ಮ್ರಂಗಕ್ಕಿಳಿಯುವ ಆಸೆ ಗರಿಕೆದರಿ ಕೂತಿದೆ.
ಆ ಕ್ಷಣ ಎಂದೋ ಯಾವತ್ತೋ . ಗೊತ್ತಿಲ್ಲ.

Thursday, April 17, 2008

...ಇದು ಕಸಮ್

ತುಂಬಾ ದಿವಸದಿಂದ ನೀವು ಬ್ಲಾಗ್ನಲ್ಲಿ ಏನೂ ಬರೆದಿಲ್ಲ.ಈ ಹುಚ್ಚಾಟಕ್ಕೇಕೆ ಬ್ಲಾಗ್ ಶುರು ಮಾಡಬೇಕಿತ್ತು ಅಂತ ಗೆಳೆಯರು ಕೊರಳ ಪಟ್ಟಿ ಹಿಡಿದುಕೊಂಡು ಕೇಳುತ್ತಿದ್ದಾರೆ. ಏನು ಉತ್ತರಿಸಲಿ?
ಅಷ್ಟೊಂದು ಕೆಲಸ ಹಚ್ಚಿಕೊಂಡುಬಿಟ್ಟಿದ್ದೇನೆ. ದಿನಕ್ಕೆ ಹದಿಮೂರು ಹದಿನಾಲ್ಕೋ ಗಂಟೆ ದುಡಿಯುವುದು ನನಗೆ ಮೊದಲಿನಿಂದಲೂ ಅಭ್ಯಾಸವಾಗಿ ಹೋಗಿದೆ. ಕೆಲಸಕ್ಕೆ ಅಂತ ನಾನು ಯಾವತ್ತೂ ಹಿಂಜರಿದವನಲ್ಲ... ಹೇಳಬೇಕೆಂದ್ರೆ ಕೆಲಸ ಇಲ್ಲದೆ ಸುಮ್ನೆ ಕೂರುವುದು ಅಂದ್ರೆ ನನಗೆ ಪರಮ ಬೋರಿನ ಕೆಲಸ. ಅದಕ್ಕಿಂತ ಬೇಜಾರಿನ ಸಂಗತಿ ಇನ್ನೊಂದಿಲ್ಲ. ಹಾಗಾಗಿ ಖಾಲಿ ಅನಸಿದಾಗಲೆಲ್ಲ ನಾನೇ ಏನಾದ್ರೂ ಕೆಲಸ ಸೃಷ್ಟಿಸಿಕೊಂಡುಬಿಡುತ್ತೇನೆ. ಅದರಿಂದ ಸಿಗುವ ಖುಷಿ ಇದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲು.ಈ ನಡುವೆ ಒಂದು ಹೊಸ ವಿಷಯ ಅಂದ್ರೆ ಕಾರು ತಗೊಂಡಿದ್ದು. ತುಂಬಾ ದಿನದಿಂದ ಆ ಬಯಕೆ ಇತ್ತು. ತಗೊಳ್ಳುವುದಾದ್ರೆ ಅದು ಕಾರೇ ಅಂತ ನಾನು ಯಾವಾಗಲೋ ಡಿಸೈಡ್ ಮಾಡಿಬಿಟ್ಟಿದ್ದೆ. ಈಗ ಆ ಕನಸು ಕೈ ಗೂಡಿದೆ. ಒಂಥರ ಹ್ಯಾಪಿ. ಆದ್ರೆ ಬಡ್ಡೀ ಮಗಂದು ಡ್ರೈವಿಂಗು ಇದೆಯಲ್ಲ ಅದು ಮಾತ್ರ ಬೆಂಗಳೂರಿನಲ್ಲಿ ನರಕವೇ! ಸುಮ್ಮನೆ ಆರಾಮಾಗಿ ಫ್ರೆಂಡ್ ಕಾರಿನಲ್ಲಿ ಕುಳಿತು ಹರಟೆ ಕೊಚ್ಚುತ್ತಾ ಹೋಗುತ್ತಿದ್ದವನು ಗಾಡಿ ತಗೊಂಡು ರಸ್ತೆಗಿಳಿದ ಮೇಲೆ ಗೊತ್ತಾಗಿದ್ದು, ಅದರ ಕಷ್ಟ ಏನೂ ಅಂತ. ಮೊನ್ನೆ ರಿಂಗ್ ರೋಡಿನ ದಿಬ್ಬವೊಂದರಲ್ಲಿ ಗಾಡಿ ಇದ್ದಕ್ಕಿದ್ದಂತೆ ಆಫ್ ಆಗಿ ಹೋಯಿತು. ಎಂಥ ಫಜೀತಿ ಅಂದ್ರೆ ಹಿಂದೆ ಇದ್ದವರೆಲ್ಲ ಹಾರ್ನ್ ಊದಿದ್ದೇ ಊದಿದ್ದು. ಟ್ರಾಫಿಕ್ ಪೊಲೀಸ್ ಬಂದು ಕಲಿಯೋದಿದ್ದರೆ ಮೈದಾನಕ್ಕೋಗಿ ಕಲೀರ್ರಿ... ರಸ್ತೆಗ್ಯಾಕ್ ಬಂದು ಪ್ರಾಣ ಹಿಂಡ್ತೀರಿ ಅಂತ ಉಗಿದು ಹೋದ. ಅವತ್ತು ನಿಜಕ್ಕೂ ನಾನು ನರ್ವಸ್ ಆಗಿಬಿಟ್ಟಿದ್ದೆ.ಆದ್ರೆ ಈ ಫ್ರೆಂಡ್ಸ್ ಇದಾರಲ್ಲ ಇವರ ಕಿತಾಪತಿ ಒಂದೊಂದಲ್ಲ. ಕಾರ್ ತಗೋ ಅಂತಿದ್ದವರೇ ಈಗ ಬನ್ರೋ ಕೂರ್ರೀ ಅಂದ್ರೆ ನಾವು ಬರೊಲ್ಲಪ್ಪ ಅಂತ ಕೈ ಎತ್ತುತ್ತಿದ್ದಾರೆ. ಇರೋದೊಂದೇ ಜೀವ ಅದನ್ನೂ ನಿನ್ನ ಕೈಲಿ ಕೊಟ್ಟು ಕಳಕೊಳ್ಳೋಕೆ ನಮಗೇನು ಹುಚ್ಚಾ ಅನ್ನೋ ಥರಾನೆ ಎಲ್ಲರೂ ಮಾತಾಡ್ತಿದಾರೆ. ಇದೆಲ್ಲ ಎಷ್ಟು ದಿನ ಅಂತ ನಾನೂ ಸುಮ್ಮನಿದ್ದುಬಿಟ್ಟಿದ್ದೇನೆ.ಈ ನಡುವೆ ನನ್ನ ಮೊದಲ ಕಥಾ ಸಂಕಲನ ಸಿದ್ಧಗೊಳ್ಳುತ್ತಿದೆ. ತುಂಬಾ ಪಾಪ್ಯುಲರ್ ಆಗಿದ್ದ ಅಂಕಣ ಇನ್ಬಾಕ್ಸ್. ಅದನ್ನು ಕೂಡ ಪುಟ್ಟ ಪುಸ್ತಕ ಮಾಡಬೇಕೆಂದುಕೊಂಡಿದ್ದೇನೆ. ಏನೇ ಅದರೂ ಈ ವರ್ಷ ನನ್ನದೂ ಅಂತ ಒಂದಿಷ್ಟು ಪುಸ್ತಕ ಬರಲೇ ಬೇಕು ಅಂದುಕೊಂಡಿದ್ದೇನೆ.ಅದರ ಬಿಡುಗಡೆಗೆ ನೀವಿಲ್ಲದೇ ಹೋದ್ರೆ ಆದೀತೆ. ಖಂಡಿತಾ ಕರೀತೀನಿ ಬಿಡಿ. ಹಾಗೆ ನದಿಪ್ರೀತಿ ಇನ್ನು ಸಣ್ಣದಾಗಿಯಾದರು ಹರಿಯುತ್ತದೆ
... ಇದು ಕಸಮ್.

Tuesday, March 4, 2008

ಕವರ್ ಪೇಜಸ್ಸೂ...........................................




ಹಾಯ್ ಫ್ರೆಂಡ್ಸ್

ಇವು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜೆಸ್ಸೂ. ಖಾಸ್ಬಾತ್ ಮತ್ತು ಚಲಂ ರವಿ ಬೆಳಗೆರೆಯವರಿಗೆ ಮಾಡಿಕೊಟ್ಟದ್ದು.

ಸಂಕುಲ ಮೂವರು ಪರಸರ ತಜ್ಞರ ಅಭಿನಂದನಾ ಗ್ರಂಥ.

ನನಗೇನೋ ಮೂರು ಇಷ್ಟ. ನಿಮಗೇ?